ಹರಿಃ ಓಂ
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋ ನಮಃ
ಕ್ರೀಡೆ ಮತ್ತು ಜ್ಯೋತಿಷ್ಯ:---
ಕಳೆದ ಲೇಖನದಲ್ಲಿ ಕ್ರೀಡಾಪಟುವಾಗಲು ಹಾಗೂ ಕ್ರೀಡಾಕ್ಷೇತ್ರದಲ್ಲಿ ಯಶಸ್ವಿಯಾಗಲು ಗ್ರಹಗಳ ಪಾತ್ರ, ಕ್ರೀಡಾಭಾವಗಳು, ರಾಶಿಗಳ ಪಾತ್ರ, ಯಾವ ಗ್ರಹಗಳು ಯಾವ ಕ್ರೀಡೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ವಿವರವಾಗಿ ತಿಳಿದುಕೊಂಡೆವು.
ಈಗ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಕ್ರೀಡೆಯಲ್ಲಿನ ಯಶಸ್ಸಿಗೆ ನಕ್ಷತ್ರಗಳೂ ಸಹ ಕಾರಣವಾಗುತ್ತವೆ. ಗ್ರಹಗಳು ಎಲ್ಲಿವೆ ಅನ್ನುವುದಕ್ಕಿಂತ ಅವು ಯಾವ ನಕ್ಷತ್ರದಲ್ಲಿದೆ ಎಂಬುದು, ಕ್ರೀಡಾಪಟುವಿನ ಶೈಲಿಯನ್ನು ನಿರ್ಧರಿಸುತ್ತವೆ.
ಕೇತುವಿನ ನಕ್ಷತ್ರಗಳಲ್ಲಿ( ಅಶ್ವಿನಿ, ಮಖ, ಮೂಲ)ಗ್ರಹಗಳಿದ್ದರೆ ಆಟಗಾರ ಅತೀ ವೇಗವಾಗಿರ್ತಾನೆ , ಉದಾಹರಣೆಗೆ fast ಬೋಲರ್ಸ್, ರವಿಯ ನಕ್ಷತ್ರಗಳು ಆಕ್ರಮಣಕಾರಿ ಸ್ವಭಾವವನ್ನು ಕೊಡುತ್ತದೆ. ಸೋಲನ್ನು ಒಪ್ಪದ ಹಠ ಇವರಲ್ಲಿ ಹೆಚ್ಚಾಗಿರುತ್ತೆ. ಚಂದ್ರನ ನಕ್ಷತ್ರಗಳು,(ರೋಹಿಣಿ, ಹಸ್ತ, ಶ್ರವಣ) ಆಟಗಾರನಿಗೆ ಉತ್ತಮವಾದ ಟೈಮಿಂಗ್ ಕೊಡುತ್ತವೆ. ಇದು ಬ್ಯಾಟ್ಸಮನ್ಗಳಿಗೆ ವರದಾನ. ಕುಜನ ನಕ್ಷತ್ರಗಳು (ಮೃಗಶಿರಾ, ಚಿತ್ತ, ಧನಿಷ್ಟ), ಇವು ಜಾತಕರಿಗೆ ಧೈರ್ಯ ಹಾಗೂ ಬಲವನ್ನು ತುಂಬುತ್ತವೆ. ಆರ್ದ್ರ ನಕ್ಷತ್ರ ತಂತ್ರಗಾರಿಕೆ ಕೊಟ್ಟರೆ, ಪೂರ್ವ ಫಲ್ಗುಣಿ ಫಿಟ್ನೆಸ್ಗಾಗಿ ಉತ್ತಮ ನಕ್ಷತ್ರ. ವಿಶಾಖ, ಜೇಷ್ಠ, ಪೂರ್ವಾಷಾಢ ವಿಶೇಷವಾಗಿ ಜಲಕ್ರೀಡೆಯನ್ನು ಪ್ರಚೋದಿಸುವ ನಕ್ಷತ್ರವಾಗಿದೆ. ಉತ್ತರಾಷಾಢ ಕುದುರೆ ಸವಾರಿ ಆಟಕ್ಕೆ ಉತ್ತಮ ನಕ್ಷತ್ರವಾಗಿದೆ. ರೇವತಿ ನಕ್ಷತ್ರ ಕೂಡ ಕ್ರೀಡೆಯನ್ನು ಪ್ರಚೋದಿಸುವ ನಕ್ಷತ್ರವಾಗಿದೆ.
ಕ್ರೀಡಾ ಜ್ಯೋತಿಷ್ಯದ ಪ್ರಮುಖ ಅಂಶಗಳು:--
ಕ್ರೀಡಾಪಟುತ್ವಕ್ಕೆ ಮುಖ್ಯವಾಗಿ ತನುಸ್ಥಾನ, ವಿಕ್ರಮಸ್ಥಾನ, 5,6,10,11 ರ ಜೊತೆ ಜೊತೆಗೆ ಸಪ್ತಮ ಸ್ಥಾನವನ್ನು ಪರಿಶೀಲಿಸಬೇಕಾಗುತ್ತದೆ . 7ನೆ ಭಾವವನ್ನೂ ಸಹ ಕ್ರೀಡಾ ಸ್ಥಾನವೆಂದೂ ಜ್ಯೋತಿಷ್ಯ ದಲ್ಲಿ ಹೇಳಿದೆ. ಜಾತಕ ಕಲಾನಿಧಿ ಗ್ರಂಥದಲ್ಲಿ "ಕಳತ್ರ ಕ್ರೀಡಾ ಭೋಗ ಕಾಮ - ಶೃಂಗಾರಕೇಳೀಭೋಜನ ವಿಹಾರ ಸಂಸಾರಕಾರಕಮ್ ಸಪ್ತಮಮ್ " ಎಂದು 7 ನೇ ಮನೆಯನ್ನು ವಿವರಿಸಿದ್ದಾರೆ. ಹಾಗೆಯೇ ಕ್ರೀಡೆಗಳಿಂದ ಸುಖ, ಅದೃಷ್ಟ, ಭಾಗ್ಯವಿದೆಯೇ ಎಂದು ತಿಳಿಯಲು ಪೋಷಕ ಭಾವಗಳಾದ ಸುಖ ಸ್ಥಾನ, ಭಾಗ್ಯಸ್ಥಾನಗಳನ್ನೂ ಪರಿಶೀಲಿಸಬೇಕಾಗುತ್ತೆ,.
ಅತ್ಯುತ್ತಮ ಕ್ರಿಕೆಟ್ ಆಟಗಾರ (ಬ್ಯಾಟ್ಸ್ಮನ್) ಆಗಬೇಕಾದರೆ , 3 ನೇ ಮನೆ ಬಲಿಷ್ಠವಾಗಿರಬೇಕು ಏಕೆಂದರೆ ಅದು ನಮ್ಮ ದೇಹದ ತೋಳುಗಳನ್ನು ಪ್ರತಿನಿಧಿಸುತ್ತದೆ.
ಫುಟ್ಬಾಲ್ ಆಟಗಾರನಿಗೆ 11 ನೇ ಮನೆ ಕಾಲುಗಳನ್ನು ಪ್ರತಿನಿಧಿಸುವುದರಿಂದ 11ನೇ ಮನೆ ಬಲವಾಗಿರಬೇಕು
ಧನು ರಾಶಿಯು ಯೋಧನಂತಹ ಮನೋಭಾವವನ್ನು ಸೂಚಿಸುತ್ತದೆ ಮತ್ತು ಈ ರಾಶಿಯಲ್ಲಿರುವ ಗ್ರಹಗಳು ಕ್ರಿಕೆಟಿ ಆಟಗಾರರಿಗೆ ಮುಖ್ಯವಾಗಿವೆ.
ಚದುರಂಗದ ಆಟಕ್ಕೆ ಬುಧ, ಶನಿ ಮತ್ತು ಚಂದ್ರನೊಂದಿಗೆ ಬುದ್ಧಿಮತ್ತೆಯನ್ನು ಪ್ರತಿನಿಧಿಸುವ 5 ನೇ ಮನೆ ಬಲವಾಗಿರಬೇಕು.
ಗುರುವು ನಿಯಮಗಳನ್ನು ಪಾಲಿಸುವ ಮೂಲಕ ಆಡಲು ವ್ಯವಸ್ಥಿತ, ನಿಯಂತ್ರಿತ ಮನೋಭಾವವನ್ನು ನೀಡುತ್ತದೆ. ಕ್ರೀಡಾ ಮನೋಭಾವವೂ ಗುರುವಿನಿಂದ ಉಂಟಾಗುತ್ತದೆ.
ಗುಂಪು ಚಟುವಟಿಕೆಗಳಿಗೆ ಶನಿ ಪ್ರಮುಖ ಪಾತ್ರ ವಹಿಸುತ್ತದೆ. ಇದು 'ತಂಡ ಮನೋಭಾವ'ವನ್ನು ನೀಡುತ್ತದೆ.
6ನೇ ಮತ್ತು 10ನೇ ಭಾವಗಳು ವಿಶೇಷವಾಗಿ ಬಲಿಷ್ಠವಾಗಿದ್ರೆ ಜಾತಕರು ಆಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರ್ತಾರೆ.
ಬಲವಾದ ಮಂಗಳ ಜೊತೆಗೆ ಬೆಂಬಲಿತ ಸೂರ್ಯ/ಚಂದ್ರ/ಬುಧ ಮತ್ತು ಶಿಸ್ತಿನ ಶನಿ/ಗುರು ಹೊಂದಿರುವ ಚಾರ್ಟ್ ಉತ್ತಮ ಅಥ್ಲೆಟಿಕ್ ಆಗುವ ಯೋಗವನ್ನು ಹೊಂದಿದೆ..
ಕ್ರೀಡೆಗೆ ಬೇಕಾದ ಎಲ್ಲ ರೀತಿಯ ಸಂಯೋಜನೆಗಳು ಜಾತಕರಿಗೆ ಜನ್ಮದಿಂದಲೇ ಬಂದಿದ್ದರೂ ಸಹ ಕ್ರೀಡಾಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಹಾಗೂ ಯಶಸ್ಸನ್ನು ಪಡೆಯುವ ಸಮಯ ಯಾವುದು ಅಂತ ನೋಡೋದಾದ್ರೆ.....
ಕ್ರೀಡಾಪಟುಗಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯಶಸ್ಸು ಪಡೆಯಲು 1,3,5,6,10, ನೇ ಅಧಿಪತಿಗಳ ದಶಕಾಲಗಳು ಅಥವಾ ಕುಜ, ಶನಿ, ರಾಹು, ಗುರು ರವಿಯ ದಶ ಕಾಲಗಳು ಉತ್ತಮವಾಗಿರುತ್ತೆ.
ಕ್ರೀಡಾಪಟುವಿನ ಯೌವನದಲ್ಲಿ ಕುಜ, ರಾಹು, ಶುಕ್ರನ ಮಹರ್ದೆಶೆಗಳು ನಡೆದರೆ ಅತೀ ವೇಗವಾಗಿ ಯಶಸ್ಸನ್ನು ಪಡೆಯುತ್ತಾರೆ.
ವೇಗದ, ಆಕ್ರಮಣಕಾರಿ ಕ್ರೀಡಾಪಟುಗಳ ಲಗ್ನದಲ್ಲಿ ಅಥವಾ 10 ನೇ ಸ್ಥಾನದಲ್ಲಿ ಮೇಷ/ವೃಶ್ಚಿಕದಲ್ಲಿ ಬಲವಾದ ಮಂಗಳ ಸ್ಥಿತ ಅಥವಾ ಸಂಚಾರ ಸಮಯದಲ್ಲಿ ಕ್ರೀಡೆಯಲ್ಲಿ ಉತ್ತಮ ಕಾರ್ಯಕ್ಷಮತೆ ಇರುತ್ತೆ.
ಕ್ರೀಡಾ ಭಾವಗಳ ಮೇಲೆ,ಮಂಗಳ/ಶನಿ/ಗುರು/ರಾಹುವಿನ ಸಂಚಾರ ಕಾಲದಲ್ಲಿ ಹೆಚ್ಚಾಗಿ ಕ್ರೀಡಾಪಟುಗಳು ಉತ್ತುಂಗಕ್ಕೇರುತ್ತಾರೆ.,
ಬಲವಾದ ಸೂರ್ಯ ಮತ್ತು ಶನಿಯ ಸ್ಥಾನಗಳು ಸಹಿಷ್ಣುತೆ ಮತ್ತು ಶಿಸ್ತನ್ನು ಒದಗಿಸುತ್ತವೆ.
ಮಂಗಳ ಮತ್ತು ಚಂದ್ರನನ್ನು ಬೆಂಬಲಿಸುವ ಬಲವಾದ ಬುಧನಿದ್ದಾಗ ಆಟಗಾರರು ತಾಂತ್ರಿಕವಾಗಿ ಕೌಶಲ್ಯಪೂರ್ಣರಾಗಿರುತ್ತಾರೆ.
ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯಶಸ್ವಿಯಾಗಲು ಯೋಗಗಳ ಪಾತ್ರವೂ ಸಹ ಇದೆ.
ಪಂಚ ಮಹಾಪುರುಷ ಯೋಗಗಳಲ್ಲಿ ರುಚಕಯೋಗ, ಭದ್ರಯೋಗ, ಹಂಸ ಹಾಗೂ ಶಶಯೋಗಗಳು ಕ್ರೀಡೆಯಲ್ಲಿ ಆಸಕ್ತಿ ಹಾಗೂ ಯಶಸ್ಸನ್ನು ನೀಡುತ್ತವೆ.
ಗಜಕೇಸರಿ ಯೋಗ, ನೀಚಭಂಗ ರಾಜಯೋಗ ಕೂಡಾ ಸಹಕಾರಿಯಾಗುತ್ತೆ. ಹಾಗೆಯೇ ವಿಪರೀತ ರಾಜಯೋಗ ಇದ್ದರೆ ಸೋಲುವ ಹಂತದಲ್ಲಿರುವ ಪಂದ್ಯವನ್ನೂ ಅನಿರೀಕ್ಷಿತವಾಗಿ ಗೆಲುವಿನತ್ತ ತಿರುಗಿಸುವ ಶಕ್ತಿ ಆಟಗಾರನಿಗೆ ಇರುತ್ತೆ.
ಕ್ರೀಡಾ ವೃತ್ತಿಜೀವನದ ಅವಧಿ:--
ಕೆಲವರು ಕ್ರೀಡೆಯಿಂದ ಬಹುಬೇಗ ನಿವೃತ್ತಿ ಹೊಂದುತ್ತಾರೆ. ಕೆಲವರು ಧೀರ್ಘವಾಗಿ ಆಟ ಆಡ್ತಾ ಇರ್ತಾರೆ. ಇದಕ್ಕೆ ಕಾರಣ ಶನಿ ಗ್ರಹದ ಸ್ಥಿತಿ..! ಶನಿ ಅಂದ್ರೇನೇ ಸ್ಥಿರತೆ...ಶುಭನಾದ ಶನಿಗ್ರಹ ಜಾತಕದಲ್ಲಿ ಕೇಂದ್ರ ತ್ರಿಕೋಣದಲ್ಲಿದ್ಸರೆ ಆಟಗಾರನಿಗೆ ಸುಧೀರ್ಘ ವೃತ್ತಿಜೀವನ ಇರುತ್ತೆ.
ಮಾರಕ ದಶಗಳು, ಹಾಗೂ ದಶ ಸಂಧಿ ಕಾಲ ಆಟಗಾರನನ್ನು ಬೇಗ ನಿವೃತ್ತಿ ಮಾಡಿಸಿಬಿಡುತ್ತೆ.
ಕ್ರೀಡಾಪಟುಗಳು ಯಶಸ್ಸಿನ ಉತ್ತುಂಗದಲ್ಲಿದ್ದಾಗ ಹಠಾತ್ತಾಗಿ ಫಾರ್ಮ್ ಕಳೆದುಕೊಂಡುಬಿಡ್ತಾರೆ. ಇದಕ್ಕೆ ಜ್ಯೋತಿಷ್ಯ ಕಾರಣ, ಸಾಡೆಸಾತಿ, ಶನಿಯ ಅಶುಭ ಪ್ರಭಾವ ಹೆಚ್ಚಾದಾಗ ಆಟಗಾರ ಎಷ್ಟೇ ಪ್ರಯತ್ನಿಸಿದರೂ ಫಲ ಸಿಗುವುದಿಲ್ಲ, ಅವರ ಶಿಸ್ತನ್ನು ಪರೀಕ್ಷಿಸುವ ಸಮಯ ಆಗಿರುತ್ತೆ. ಅಷ್ಟಮ ಶನಿಯ ಕಾಲದಲ್ಲಿ injuries ಮತ್ತು ಕಾಂಟ್ರಾವರ್ಸಿ ಆಗುವ ಸಂಭವವೇ ಹೆಚ್ಚು. ಅಶುಭ ರಾಹು /ಕೇತುಗಳ ಸಂಚಾರ ಕಾಲದಲ್ಲಿ ಕೂಡ ಆಟಗಾರರು ಮಾನಸಿಕ ಒತ್ತಡಕ್ಕೆ ಒಳಗಾಗಿ ತಪ್ಪು ನಿರ್ಧಾರ ತೊಗೋತಾರೆ.
6ನೇ ಮನೆ ಅಪಘಾತಗಳನ್ನು ಸೂಚಿಸುತ್ತೆ, 6th lord ಕುಜನ ಜೊತೆಗೆ ಅಶುಭ ಸಂಪರ್ಕದಲ್ಲಿದ್ದಾಗ ಆಟಗಾರ ಪದೇ ಪದೇ ಗಾಯಕ್ಕೆ ಒಳಗಾಗುತ್ತಾನೆ.
8ನೇ ಮನೆ ಧೀರ್ಘಕಾಲದ ನೋವು ಮತ್ತು ಸರ್ಜರಿಯನ್ನು ಸೂಚಿಸುತ್ತೆ. ಶನಿ ಮತ್ತು ರಾಹುವಿನ ಅಶುಭ ಪ್ರಭಾವ 8 ನೇ ಮನೆಯ ಮೇಲಿದ್ದರೆ.. ನೋವು ಮತ್ತು ಶಸ್ತ್ರಚಿಕಿತ್ಸೆಯ ಕಾರಣದಿಂದ ವೃತ್ತಿ ಜೀವನಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತೆ.
ಗೆಲುವಿನ ಕ್ಷಣ :--
ಕ್ರೀಡಾoಗಣದಲ್ಲಿ ಒಬ್ಬ ಆಟಗಾರನ ಪ್ರದರ್ಶನವು ಆತನ ಕಠಿಣ ಪರಿಶ್ರಮದ ಮೇಲೆ ನಿರ್ಧಾರಿತವಾಗಿರುತ್ತವೆ ಎನ್ನುವುದು ಸತ್ಯವಾದರೂ... ಅದೇ ಆಟಗಾರ ಅನಿರೀಕ್ಷಿತವಾಗಿ ಜಯಗಳಿಸುವುದು ಹಾಗೂ ಅಂತಿಮ ಕ್ಷಣದಲ್ಲಿ ಸೋಲಾಗುವುದರ ಹಿನ್ನೆಲೆಯಲ್ಲಿ ಗ್ರಹಗಳ ಪಾತ್ರವೂ ಇದೆ..!
ಆಟಗಾರ ಎಷ್ಟೇ ಶ್ರೇಷ್ಠನಾಗಿದ್ದರೂ ಪಂದ್ಯ ನಡೆಯುವ ದಿನದ ಚಂದ್ರನ ಸ್ಥಿತಿ ಆತನ ಪ್ರದರ್ಶನವನ್ನು ನಿರ್ಧರಿಸುತ್ತದೆ. ಪಂದ್ಯದ ದಿನ ಆಟಗಾರನ ಜನ್ಮರಾಶಿಯಿಂದ ಉಪಚಯ
ಸ್ಥಾನಗಳಾದ... 3, 6, 10, 11ನೇ ಭಾವಗಳಲ್ಲಿದ್ದರೆ ಆ ದಿನ ಆ ಆಟಗಾರನಿಗೆ ಅದೃಷ್ಟದ ದಿನವಾಗಿರುತ್ತೆ.
ಒಂದುವೇಳೆ ಚಂದ್ರ 8,12ನೇ ಮನೆಯಲ್ಲಿದ್ದರೆ ಎಷ್ಟೇ ಪ್ರಯತ್ನ ಪಟ್ಟರೂ ಅಂತಿಮ ಕ್ಷಣದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತೆ..
ಸಂಖ್ಯಾ ಶಾಸ್ತ್ರ ಮತ್ತು ಕ್ರೀಡೆ :--
ಪ್ರತಿಯೊಂದು ಸಂಖ್ಯೆಯೂ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತೆ, ಯಾವ ಗ್ರಹದ ಸಂಖ್ಯೆ ಯಾವ ಕ್ರೀಡಾಪಟುವಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ ತಿಳಿಯಬಹುದು. ಯಾವ ಸಂಖ್ಯೆ ಅನುಕೂಲಕರವೋ ಆ ಸಂಖ್ಯೆಯ ಜೆರ್ಸಿಯನ್ನು ಕ್ರೀಡಾಪಟುಗಳು ಆಯ್ಕೆ ಮಾಡಿಕೊಳ್ಳುತ್ತಾರೆ.
ಸಂಖ್ಯೆ 7 :-- ಭಾರತದ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಹಾಗೂ ವಿಕೆಟ್ ಕೀಪರ್ ಆಗಿದ್ದ ಧೋನಿ ಯವರ ಜೆರ್ಸಿ ಸಂಖ್ಯೆ 7. ಇದು ಕೇತುವಿನ ಸಂಖ್ಯೆ, ಇದು ಅಧ್ಯತ್ಮಿಕತೆ ಮತ್ತು ಅಂತಃಪ್ರಜ್ಞೆಯನ್ನು ಸೂಚಿಸುತ್ತದೆ, ಧೋನಿಯವರ ಕ್ಯಾಪ್ಟನ್ ಕೂಲ್ ಸ್ವಭಾವ ಮತ್ತು ಕೊನೆಯ ಕ್ಷಣದ ನಿರ್ಧಾರಗಳಿಗೆ ಈ ಸಂಖ್ಯೆಯ ಬಲವೂ ಕಾರಣ.
ಸಂಖ್ಯೆ 10 :---10 ಎನ್ನುವುದು ಸೂರ್ಯನ ಸಂಖ್ಯೆ, ಸೂರ್ಯನು ಪ್ರಭುತ್ವ ಮತ್ತು ರಾಜತ್ವವನ್ನು ಪ್ರತಿನಿಧಿಸುತ್ತಾನೆ. ಕ್ರಿಕೆಟ್ ದೇವರೆಂದೇ ಹೆಸರಾದ ಸಚಿನ್ ಟೆಂಡೂಲ್ಕರ್ ಅವರ ಜೆರ್ಸಿ ಸಂಖ್ಯೆ 10, ಸಚಿನ್ ರವರು ಕ್ರೀಡಾಕ್ಷೇತ್ರದಲ್ಲಿ ರಾಜನಂತೆ ಮಿಂಚಲು ಈ ಸಂಖ್ಯೆಯೂ ಒಂದು ಕಾರಣವಿರಬಹುದು..
ತಂಡದ ನಾಯಕತ್ವ :--
ಒಳ್ಳೆಯ ಆಟಗಾರರೆಲ್ಲರೂ ಒಳ್ಳೆಯ ನಾಯಕರಾಗಲು ಸಾಧ್ಯವಿಲ್ಲ. ನಾಯಕತ್ವಕ್ಕೆ ಕೆಲವು ವಿಶೇಷ ಶಕ್ತಿಗಳಿರಬೇಕು.
ಕ್ರೀಡಾಪಟುವಿನ ಜಾತಕದಲ್ಲಿ ಸಿಂಹರಾಶಿಯ ಪ್ರಭಾವವಿರಬೇಕು. ಸೂರ್ಯ ಮತ್ತು ಸಿಂಹರಾಶಿ ಪ್ರಭಲವಾಗಿದ್ದರೆ ಅಂತಹವರು ನೂರಾರು ಜನರನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ.
ವಿವೇಕವನ್ನು ನೀಡುವ ಗುರುಗ್ರಹದ ದೃಷ್ಟಿಯು ಸೋಲಿನ ಸಮಯದಲ್ಲಿರುವ ತಂಡವನ್ನು ಕುಗ್ಗದಂತೆ ಸರಿಯಾದ ತಂತ್ರ ರೂಪಿಸಲು ಸಹಾಯಮಾಡುತ್ತದೆ.
ವಿಶ್ವ ಚಾoಪಿಯನ್ ಆಗಲು ವಿಷೇಶ ಅಂಶಗಳು :--
ಆಟಗಾರರು ಸ್ಥಳೀಯವಾಗಿ ಆಟವಾಡುವುದಕ್ಕೂ.. ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ.
ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಕೌಶಲ್ಯವನ್ನು ಆಟಗಾರನಿಗೆ ಕೊಡುವುದು ರಾಹು, ರವಿ ಹಾಗೂ ಗುರು ಗ್ರಹಗಳು.
ಆಟಗಾರನಿಗೆ ರಾಹುವಿನ ಶುಭಪ್ರಭಾವ ಅತೀ ಮುಖ್ಯ, ರಾಹುವು 3 ಅಥವಾ 11ನೇ ಮನೆಯಲ್ಲಿದ್ದರೆ ಜಾತಕರು ಯಾರೂ ಊಹಿಸಲಾಗದ ತಂತ್ರಗಳನ್ನು ಬಳಸಿ ಗೆಲ್ಲುತ್ತಾರೆ.
ಸೂರ್ಯನು ಪ್ರಭಲವಾಗಿದ್ದರೆ ಮಾತ್ರ ಒಬ್ಬ ಆಟಗಾರ ಸಾವಿರಾರು ಜನಗಳ ಮುಂದೆ ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಆಡಬಲ್ಲ.
ಗುರುವಿನ ಅನುಗ್ರಹವು ಭಾಗ್ಯದ ಸಂಕೇತ, ಎಷ್ಟೇ ಕಷ್ಟಪಟ್ಟರೂ ಅಂತಿಮ ಕ್ಷಣದಲ್ಲಿ ಅದೃಷ್ಟ ಕೈಹಿಡಿಯಬೇಕಾದರೆ ಗುರುವಿನ ದೃಷ್ಟಿ ಇರಲೇಬೇಕು.
ಬಣ್ಣಗಳು ಹಾಗೂ ತಂಡದ ಯಶಸ್ಸು:--
ಕ್ರೀಡಾ ತಂಡಗಳ ಜೆರ್ಸಿ ಬಣ್ಣದ ಹಿಂದೆ ಕೂಡ ಬಲವಾದ ಜ್ಯೋತಿಷ್ಯ ಅಂಶವಿದೆ.
ನೀಲಿ ಬಣ್ಣ :-- ಈ ಬಣ್ಣ ಶನಿಗ್ರಹದ್ದು, ಇದು ಸ್ಥಿರತೆ ಮತ್ತು ಗಾಂಭೀರ್ಯದ ಸಂಕೇತ. ಭಾರತದ ಕ್ರಿಕೆಟ್ ತಂಡದ ಈ ಬಣ್ಣವು ತಂಡಕ್ಕೆ ಒಂದು ರೀತಿಯ ಕೂಲ್ ಮತ್ತು ಸ್ಟೇಬಲ್ ಶಕ್ತಿಯನ್ನು ನೀಡುತ್ತದೆ.
ಹಳದಿ ಬಣ್ಣ :-- ಇದು ಗುರುಗ್ರಹದ ಬಣ್ಣ, ಈ ಬಣ್ಣವು ಜ್ಞಾನ, ತಂತ್ರ, ಮತ್ತು ಅದೃಷ್ಟವವನ್ನು ಪ್ರತಿನಿಧಿಸುತ್ತದೆ. (CSK ತಂಡದ ಬಣ್ಣ ಹಳದಿ)
ಕೆಂಪು ಬಣ್ಣ :-- ಕುಜನ ಈ ಬಣ್ಣ ಆಕ್ರಮಣ ಕಾರಿ ಆಟಕ್ಕೆ ಪ್ರಚೋದಿಸುತ್ತದೆ
ಕ್ರೀಡಾ ಫಲಿತಾಂಶ ಹಾಗೂ ಗ್ರಹಣ :--
ವಿಶ್ವ ಕಪ್ ನಂತಹ ದೊಡ್ಡ ಮಟ್ಟದ ಪಂದ್ಯಾವಳಿಗಳು ನಡೆಯುವಾಗ, ಸೂರ್ಯ ಅಥವಾ ಚಂದ್ರ ಗ್ರಹಣಗಳು ಸಂಭವಿಸಿದರೆ, ಅದು ಕ್ರೀಡಾ ಲೋಕದಲ್ಲಿ ದೊಡ್ಡ ಮಟ್ಟದ ಬೇಸರ, ಅಸಮಾಧಾನಕ್ಕೆ ಕಾರಣವಾಗುತ್ತದೆ. ಬಲಿಷ್ಠವಾದ ತಂಡಗಳು ಅನಿರೀಕ್ಷಿತವಾಗಿ ಸೋಲುವುದು, ಹೆಸರೇ ಇಲ್ಲದ ತಂಡಗಳು ಇದ್ದಕ್ಕಿದ್ದಂತೆ ಗೆದ್ದು ಚಾoಪಿಯನ್ ಆಗುವುದು.. ಇದೆಲ್ಲ ಗ್ರಹಣದ ಪ್ರಭಾವವೇ ಎಂದು ಊಹಿಸಬಹುದು, ಗ್ರಹಣವು ನಾಯಕರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಲ್ಲದು.
ಹಸ್ತಾಕ್ಷರ ಮತ್ತು ಜ್ಯೋತಿಷ್ಯ:--
ಆಟಗಾರರ ಸಹಿ ಕೂಡ ಅವರ ಗ್ರಹಗತಿಗಳನ್ನು ಪ್ರತಿಬಿಂಬಿಸುತ್ತವೆ, ಯಾರು ತಮ್ಮ ಹೆಸರಿನ ಕೆಳಗೆ ಮೇಲ್ಮುಖ ವಾಗಿ ಗೆರೆ ಎಳೆಯುತ್ತಾರೋ ಅವರು ಅತೀವ ಆತ್ಮವಿಶ್ವಾಸ ಮತ್ತು ಹೋರಾಟದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಬಹುದು.
ಸಹಿ ಮಾಡುವಾಗ ಅಕ್ಷರಗಳು ದೊಡ್ಡದಾಗಿದ್ದರೆ, ಅವರು ಮೈದಾನದಲ್ಲಿ ಡಾಮಿನೇಟ್ ಮಾಡಲು ಇಷ್ಟಪಡುತ್ತಾರೆ, ಅದು ಅವರ ಜಾತಕದ ಸೂರ್ಯನ ಪ್ರಭಾವವನ್ನು ತೋರಿಸುತ್ತದೆ.
ಅದೃಷ್ಟ ಮಹೂರ್ತ :--
ಟಾಸ್ ಗೆಲ್ಲುವುದೂ ಕೂಡ ಒಂದು ಅದೃಷ್ಟವೇ..!! ಪಂದ್ಯರಂಭ ಸಮಯದಲ್ಲಿ ತಂಡದ ನಾಯಕನಿಗೆ ಶುಭಹೋರೆ ಅಥವಾ ಅಮೃತ ಘಳಿಗೆ ನಡೆಯುತ್ತಿದ್ದರೆ ಟಾಸ್ ಗೆಲ್ಲುವ ಮತ್ತು ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪಂದ್ಯ ನಡೆಯುವ ಸಮಯದ ಗೋಚಾರ ಮತ್ತು ಕ್ರೀಡಾoಗಣ ಇರುವ ದಿಕ್ಕು ಕೂಡ ಪ್ರಭಾವ ಬೀರುತ್ತೆ.
ಕ್ರೀಡಾಪಟುಗಳಿಗೆ ಜ್ಯೋತಿಷ್ಯ ಸಲಹೆ:--
ಕ್ರೀಡೆಯಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ದೈಹಿಕ ಪೆಟ್ಟುಗಳಿಂದ ಪಾರಾಗಲು ಕೆಲವು ಸಲಹೆಗಳು ಹೀಗಿವೆ.
ಧ್ಯಾನ ಮತ್ತು ಪ್ರಾಣಾಯಾಮ, ಇದು ಬುಧ ಮತ್ತು ಚಂದ್ರನನ್ನು ಬಲಪಡಿಸಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಮಾನಸಿಕ ಶಾಂತಿಗಾಗಿ ಬೆಳ್ಳಿ ಆಭರಣವನ್ನು ಧರಿಸುವುದು ಕೂಡ ಕೆಲವರಿಗೆ ಸಹಕಾರಿ.
ಕುಜನ ಅನುಗ್ರಹಕ್ಕಾಗಿ ಅಭ್ಯಾಸದ ಸಮಯದಲ್ಲಿ ಕೆಂಪು ಬಣ್ಣದ ವಸ್ತ್ರ ಅಥವಾ ಕರವಸ್ತ್ರ ಬಳಸುವುದ್ರಿಂದ ಆತ್ಮವಿಶ್ವಾಸ ಹೆಚ್ಚುತ್ತೆ.
ಜಾತಕದಲ್ಲಿ ಅಡೆತಡೆಗಳಿದ್ದರೆ ಜ್ಯೋತಿಷ್ಯದ ಪರಿಹಾರಗಳೆಂದರೆ.....
ಕುಜನ ದೋಷವಿದ್ದರೆ, ಅಥವಾ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹನುಮಂತನ ಆರಾಧನೆ, ಹನುಮಾನ್ ಚಾಲೀಸ ಪಠನೆ ಶ್ರೇಷ್ಠ.
ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಕುಗ್ಗಿದಾಗ ಸೂರ್ಯ ನಮಸ್ಕಾರ ಮತ್ತು ಸೂರ್ಯನ ಆರಾಧನೆ ಉತ್ತಮ.
ಜಾತಕ ವಿಶ್ಲೇಷಣೆಯ ನಂತರ ಹವಳ ಅಥವಾ ಪಚ್ಚೆ ರತ್ನಧಾರಣೆ ಮಾಡುವುದು ಸಹ ಕ್ರೀಡೆಯಲ್ಲಿ ಸಹಕಾರಿಯಾಗಬಲ್ಲದು.
ಶನಿ ಮತ್ತು ರಾಹುವಿನ ಅಶುಭ ಪ್ರಭಾವದಿಂದ ವೃತ್ತಿಜೀವನಕ್ಕೆ ಸಮಸ್ಯೆಯಾದರೆ, ಹನುಮಂತ ದೇವರಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದು ಮತ್ತು ಶನಿ ಶಾಂತಿ ಮಾಡಿಸುವುದು ಉತ್ತಮ.
ಒಟ್ಟಿನಲ್ಲಿ ಕ್ರೀಡೆಯಲ್ಲಿ ಯಶಸ್ವೀಯಾಗಬೇಕೆಂದರೆ, ಜಾತಕದ 1,3,5,6,10,11,ನೇ ಸ್ಥಾನಗಳ ಜೊತೆಗೆ ಚತುರ್ಥ, ಸಪ್ತಮ, ಭಾಗ್ಯ ಸ್ಥಾನಗಳು, ರವಿ, ಕುಜ, ಬುಧ, ಗುರು, ಶುಕ್ರ, ಚಂದ್ರ, ಶನಿಗ್ರಹಗಳ ಜೊತೆ ಜೊತೆಗೆ ರಾಹು ಕೇತುಗಳೂ ಬಲಾಢ್ಯವಾಗಿರಬೇಕಾಗುತ್ತದೆ.
ಭಾರತದ ಪ್ರಮುಖ ಮಹಿಳಾ ಕ್ರೀಡಾಪಟುಗಳು
ಆಕ್ರಮಣಕಾರಿ ಬ್ಯಾಟರ್.
ಇದುವರೆಗೂ 131 ಪಂದ್ಯಗಳನ್ನು ಮುನ್ನಡೆಸಿದ್ದು 77 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅದ್ಭುತ ನಾಯಕಿ ಅಂತಲೇ ಹೇಳಬಹುದು.
ಗೂಗಲ್ ನಲ್ಲಿ ಸಿಕ್ಕ ಜನ್ಮವಿವರಗಳ ಆದಾರದ ಮೇರೆಗೆ ಹರ್ಮಂಪ್ರೀತ್ ಕೌರ್ ರವರ
* ಲಗ್ನ -ವೃಶ್ಚಿಕ
* ಪೂರ್ವಬಾದ್ರ 2 ನೇ ಪಾದ ಕುಂಭರಾಶಿ
* ಲಗ್ನಾಧಿಪತಿ ಕುಜ 6 ನೇ ಅಧಿಪತಿಯೂ ಆಗಿ ಕೃತಿಕಾ 3 ನೆ ಪಾದ ವೃಶಭ ರಾಶಿಯಲ್ಲಿ ಪಂಚಮಾಧಿಪತಿ ಗುರುವಿನೊಂದಿಗೆ ಸ್ಥಿತನಾಗಿದ್ದು ಲಗ್ನವನ್ನು ದೃಷ್ಟಿಸುತ್ತಿರುವುದು... ಲಗ್ನ ಬಲಯುತವಾಗಿದೆ ಎಂದು ತಿಳಿಸುತ್ತೆ.
* ಕುಜ ಕೂಡ ಗುರುವಿನೊಂದಿಗಿದ್ದು ಮಿತ್ರ ರವಿಯ ನಕ್ಷತ್ರ ದಲ್ಲಿರುವುದರಿಂದ, ಸಪ್ತಮ ಕೇಂದ್ರದಲ್ಲಿರುವುದರಿಂದ ಕುಜ ಸಹ ಸ್ಟ್ರಾಂಗ್ ಅಂತ ಹೇಳಬಹುದು.
* ವಿಕ್ರಮ ಸ್ಥಾನಾಧಿಪತಿ ಶನಿಗ್ರಹ ಧನಸ್ಸಿನಲ್ಲಿ ಸ್ಥಿತನಿದ್ದು ಜಾತಕರಿಗೆ ಮತ್ತಷ್ಟು ಧೈರ್ಯವನ್ನು ತುಂಬಿ ನ್ಯಾಯಯುತವಾದ ಆಕ್ರಮಣಕಾರಿ ಆಟಗಾರಳನ್ನಾಗಿ ಮಾಡಿದೆ, ಜೊತೆಗೆ ಗುರುವಿನ ದೃಷ್ಟಿಯೂ ವಿಕ್ರಮಸ್ಥಾನಕ್ಕಿದೆ.
* ಪ್ರತಿಭೆಯನ್ನು ಸೂಚಿಸುವ ಪಂಚಮಧಿಪತಿಯು, ಲಗ್ನ - 6ನೇ ಅಧಿಪತಿಯಾದ ಕುಜನೊಟ್ಟಿಗೆ ಸಪ್ತಮ ಕೇಂದ್ರದಲ್ಲಿದ್ದು, ಇವರಿಗೆ ಕ್ರಿಕೆಟ್ನಲ್ಲಿ ಆಸಕ್ತಿ ಹಾಗೂ ಯಶಸ್ಸನ್ನು ಕೊಟ್ಟಿದೆ.
* 10th ಅಧಿಪತಿಯಾದ ರವಿಗೆ 7th, 9th, 11th ಅಧಿಪತಿಗಳ ಸಂಯೋಜನೆ ಚತುರ್ಥ ಕೇಂದ್ರವಾದ ಕುಂಭದಲ್ಲಿ ಇದ್ದು ತನ್ನ ಸ್ವಕ್ಷೇತ್ರ 10 ನೇ ಸ್ಥಾನವನ್ನು ವೀಕ್ಷಿಸುತ್ತಿರುವುದರಿಂದ, ಲಗ್ನಾಧಿಪತಿ ಕುಜನ ದೃಷ್ಟಿ ಕೂಡ 10 ರ ಮೇಲಿರುವುದರಿಂದ 10ನೆ ಭಾವ ಕೂಡ ಬಲವಾಯ್ತು. ಇದರಿಂದ ಇವರು ತಂಡದ ನಾಯಕಿ ಆಗುವ ಯೋಗ ಉಂಟಾಯ್ತು. ಜೊತೆಗೆ ರಾಹುವಿನ ಬಾಹುಬಲವೂ ಸೇರಿ ಪ್ರಚಂಡ ವಿಜಯವನ್ನು ಸಾಧಿಸುವ ಯೋಗ ಉಂಟಾಯ್ತು.
* ದಶಮಾಧಿಪತಿಗೆ 11 ನೇ ಅಧಿಪತಿಯ ಸಂಬಂಧ ಅನೇಕ ಪ್ರಶಸ್ತಿಗಳು, ಧನಲಾಭ ಎಲ್ಲವೂ ಸಿಕ್ಕಿದೆ.
ದಶಮ ಸ್ಥಾನದಲ್ಲಿರುವ ಕೇತು ಇವರಿಗೆ ಕೀರ್ತಿಯನ್ನು ತಂದುಕೊಟ್ಟಿದೆ.
* 3rd ಅಧಿಪತಿ ಶನಿದಶೆ ಶುಕ್ರಭುಕ್ತಿಯಲ್ಲಿ, ಇವರು ತಮ್ಮ 20 ನೆ ವರ್ಷದಲ್ಲಿ, 2009 ನೆ ಇಸವಿಯಲ್ಲಿ ಕ್ರಿಕೆಟ್ ಆಟಕ್ಕೆ ಪಾದಾರ್ಪಣೆ ಮಾಡಿದರು.
* ಪ್ರಸ್ತುತ 11th ಅಧಿಪತಿ ಬುಧನ ದೆಶೆ ನಡೆಯುತ್ತಿದ್ದು, ಈ ದಶ ಕೂಡ ಅವರನ್ನು ಕ್ರೀಡೆಯಲ್ಲಿ ಉನ್ನತಿ ತಂದುಕೊಡಲಿದೆ.
ಇವರ ಕುಂಡಲಿಯಲ್ಲಿ ಕ್ರೀಡೆಗೆ ಪ್ರಮುಖವಾದ ಗ್ರಹಗಳೆಲ್ಲರೂ ಕೇಂದ್ರಸ್ಥಾನದಲ್ಲಿ ಸ್ಥಿತರಾಗಿ ಇವರನ್ನು ಅಪ್ರತಿಮ ಕ್ರಿಕೆಟ್ ಕ್ರೀಡಾಪಟುವನ್ನಾಗಿ ಮಾಡಿದೆ.
ಸ್ಮೃತಿ ಮಂಧಾನ:---
ತಂಡದ ಸ್ಟಾರ್ ಆರಂಭಿಕ ಬ್ಯಾಟರ್.
● ಲಗ್ನಾಧಿಪತಿ ತನ್ನ ಸ್ವಕ್ಷೇತ್ರ ಧನಸ್ಸುವಿನಲ್ಲಿ ದಶಮಸ್ಥಾನಸ್ಥಿತನಾದ್ದರಿಂದ ಲಗ್ನಾಧಿಪತಿ ಬಲಯುತ. ಜೊತೆಗೆ ಕ್ರೀಡಾ ಜ್ಯೋತಿಷ್ಯ ದಲ್ಲಿ ಪ್ರಮುಖವಾದ ಗ್ರಹ ಕುಜ ಹಾಗೂ ಗುರುವು ಪರಸ್ಪರ ದೃಷ್ಟಿಯಿಂದ ಇವರಿಗೆ ಕ್ರಿಕೆಟ್ ಕ್ರೀಡೆಯಲ್ಲಿ ಆಸಕ್ತಿ ಬಂದಿದೆ.● ಲಗ್ನದಲ್ಲಿನ ಶನಿ, ಕೇತುವಿನಿಂದ ತಾರ್ಕಿಕವಾಗಿ, ಶಿಸ್ತುಬದ್ಧವಾಗಿ ಆಟವಾಡ್ತಾರೆ, ಸಪ್ತಮದ ರಾಹು ಲಗ್ನವನ್ನು ದೃಷ್ಟಿಸಿ, ಬಲ ಪರಾಕ್ರಮವನ್ನು ಕೊಟ್ಟು ಆಕ್ರಮಣಕಾರಿ ಆಟವಾಡಲು ಪ್ರಚೋದಿಸುತ್ತೆ.● 3rd ಲಾರ್ಡ್ ಶುಕ್ರ 3ರಲ್ಲೇ ಇದ್ದು ಬಲಯುತನಾಗಿದ್ದಾನೆ. ರಾಹುವಿನ ಪಂಚಮ ದೃಷ್ಟಿ ಶುಕ್ರನ ಮೇಲಿದ್ದು, ಆಟದ ಮೈದಾನದಲ್ಲಿ ತನ್ನ ಪರಾಕ್ರಮ ಮೆರೆಯುವಂತೆ ಮಾಡಿದ್ದಾನೆ.● ಪಂಚಮಾಧಿಪತಿ ಚಂದ್ರ ಪಂಚಮದಲ್ಲಿಯೇ ಇದ್ದು ಜಾತಕಿಗೆ ಸಹಾನುಭೂತಿ, ರಕ್ಷಣಾತ್ಮಕ ಮನೋಭಾವ, ಊಹಾತ್ಮಕ ಶಕ್ತಿ, ಜನರೊಡನೆ ಭಾವನಾತ್ಮಕ ಸಂಪರ್ಕ ಸಾಧಿಸುವ, ನಿಭಾಯಿಸುವ, ಸಾಮರ್ಥ್ಯವನ್ನು ಕೊಟ್ಟಿದೆ.● 5th ಲಾರ್ಡ್ ಚಂದ್ರನು ಬುಧನ ನಕ್ಷತ್ರದಲ್ಲಿ ಬುಧನೊಟ್ಟಿಗೆ ಇದ್ದು, ಚುರುಕುತನದ ಜೊತೆಗೆ ಕ್ರಿಯಾತ್ಮಕವಾಗಿ ಯೋಚಿಸಿ ಕಾರ್ಯರೂಪಕ್ಕಿಳಿವ ಗುಣವನ್ನು ಕೊಟ್ಟಿದೆ. • 6th ಲಾರ್ಡ್ ರವಿ 5th ಲ್ಲಿ ಚಂದ್ರ ಬುದರ ಜೊತೆಗೆ ಇದ್ದು ಜಾತಕಿಗೆ ಸ್ಥಿತಿಸ್ಥಾಪಕತ್ವ, ಅಂತಃಪ್ರಜ್ಞೆ ಮತ್ತು ಇತರರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯ ಕೊಟ್ಟಿದೆ. ಈ ಗುಣಗಳು ಮೈದಾನದಲ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ನಾಯಕತ್ವದಲ್ಲಿ ಪ್ರತಿಫಲಿಸುತ್ತವೆ. • ಧನ, ಭಾಗ್ಯಾಧಿಪತಿಯಾದ ಕುಜ ಚತುರ್ಥ ಕೇಂದ್ರದಲ್ಲಿ ಸ್ಥಿತನಾಗಿ, ಗುರುವಿನ ವೀಕ್ಷಣೆಯಲ್ಲಿ, ಇವರಿಗೆ, ಧೈರ್ಯ ಹಣ, ಕ್ರೀಡಾ ಜೀವನದ ಸುಖ, ಭಾಗ್ಯವನ್ನು ಕೊಟ್ಟು ಯಶಸ್ವೀ ಕ್ರೀಡಾತಾರೆಯನ್ನಾಗಿ ಮಾಡಿದೆ.• 10th ಲಾರ್ಡ್, ಗುರು 10 ರಲ್ಲೇ ಇದ್ದು, ಕುಜನ ದೃಷ್ಟಿ ಪಡೆದು ಕೀರ್ತಿ, ಪ್ರಶಸ್ತಿ ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಕೊಡುವಲ್ಲಿ ಸಹಕಾರಿಯಾಗಿದೆ.• 11th ಲಾರ್ಡ್ ಶನಿಯು ಲಗ್ನದಲ್ಲೇ ಕೇತುವಿನೊಂದಿಗಿದ್ದು, ಇವರಿಗೆ ಸಲ್ಲಬೇಕಾದ ಮಾನಸಮ್ಮಾನ, ಲಾಭ ಪ್ರಶಸ್ತಿ ಎಲ್ಲವನ್ನೂ ಕೊಟ್ಟು ಕೀರ್ತಿ ಪತಾಕೆಯನ್ನು ಹಾರಿಸಿದೆ.• ಕೇತುದೆಶೆ ರಾಹುಭುಕ್ತಿಯಲ್ಲಿ ಇವರು ತಮ್ಮ 9 ನೆ ವಯಸ್ಸಿಸಲ್ಲಿ ಕ್ರಿಕೆಟ್ ಸ್ಪರ್ಧೆ ಯಲ್ಲಿ ಭಾಗವಹಿಸಿದರು, • ಪ್ರಸ್ತುತ 3 ನೆ ಅಧಿಪತಿ ಶುಕ್ರದೆಶೆ ನಡೆಯುತ್ತಿದ್ದು, ಶುಕ್ರದೆಶೆ ಶನಿ ಭುಕ್ತಿಯಲ್ಲಿ ಕಳೆದ ವರ್ಷ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತದ ಪರವಾಗಿ ಗೆದ್ದು ದೇಶದ ಗೌರವವನ್ನು ಎತ್ತಿ ಹಿಡಿದಿದ್ದಾರೆ.ಇವರ ಜಾತಕದಲ್ಲಿ ಕ್ರೀಡಾಗ್ರಹಗಳು ಕೇಂದ್ರ ತ್ರಿಕೋಣದಲ್ಲಿದ್ದು ಇವರನ್ನು ಉತ್ತಮ ಕ್ರಿಕೆಟ್ ಪಟುವನ್ನಾಗಿ ಮಾಡಿದೆ.
No comments:
Post a Comment